ಶನಿವಾರ, ಜನವರಿ 5, 2013

ಬ್ರಾಹ್ಮಣರ ಬೇಕರಿಯ ನೊಣ




ನೀನು ಏನಾಗಬೇಕು?
ಧುತ್ತನೆ ಎದುರಾದಾಗ ಈ ದೊಡ್ಡ ಪ್ರಶ್ನೆ
ನಾನಿನ್ನೂ ಸಣ್ಣವ !
ಸಂತೆಬೀದಿಯ ಬ್ರಾಹ್ಮಣರ ಬೇಕರಿಯ,
ನೊಣವಾಗಬೇಕುಎಂದಿದ್ದೆ
ಅಪ್ಪ  ಮನಸಾರೆ ನಕ್ಕಿದ್ದರು !
ಆವತ್ತಿಗೆ ,
ತುಪ್ಪದ ಮೈಸೂರುಪಾಕಿನ ಮೇಲೆ ಕುಳಿತ
ನೊಣದ ಭಾಗ್ಯದ ಮುಂದೆ
ಮಿಕ್ಕಿದ್ದೆಲ್ಲ ಗೌಣ !!

ಕಾಲಾಂತರದಲ್ಲಿ  ಮತ್ತೆ ಎದುರಾದದ್ದು
ಪ್ರೈಮರಿ ಶಾಲೆಯ ಮೇಷ್ಟ್ರಿಂದ,
ತಣ್ಣಗೆ ಹಾಡುತ್ತಿದ್ದ  ಪ್ರಮಿಳ
ಸಿಂಗರ್ಆಗ್ತೀನಿ ಎಂದಿದ್ದಳು ನುಲಿಯುತ್ತ
ಸಣಕಲ ಪುಟ್ಸಾಮಿ ಸೆಟೆದು ನಿಂತು
ಪೋಲಿಸ್  ಎಂದ
ಪರೀಕ್ಷೆಗಳಲ್ಲಿ  ಸೊನ್ನೆ ಸುತ್ತುತ್ತಿದ್ದ ಸೀನ
ನಾನು ಮೇಟ್ರು  ಆಯ್ತೀನಿ 'ಎಂದು ಬೀಗಿದ್ದ
ಇನ್ನು ನಾನು ..ಡಿಸಿ ಎಂದಿದ್ದೆ.
ಮಿಕ್ಕವರದ್ದು ..ಹೆಚ್ಚುಕಡಿಮೆ ಅದೇ ಪುನಾರವರ್ತನೆ
ಆದರೆ ಕಡ್ಡಿಶಂಕರ,
ನಾನು ಗಾಯಿತ್ರಿ ಗಂಡ ಆಯ್ತ್ಹೀನಿ ಸಾ..
ಅವನ ದಿಟ್ಟ ಉತ್ತರಕ್ಕೆ  ಕೆರಳಿದ ಮೇಷ್ಟ್ರು ..
ಕರುಣಿಸಿದ್ದು ..
ದಿನವಿಡೀ  ಕುಕ್ಕರುಗಾಲಿನ ಶಿಕ್ಷೆ .
ಮುದುಡಿಕುಳಿತಿದ್ದ  ಗಾಯಿತ್ರಿ ಕಣ್ಣಲ್ಲಿ
ಧಾರಾಕಾರ ತುಂಗಭಧ್ರೆ !
ಆದ  ಅವಮಾನಕ್ಕೋ ..ಶಂಕರನ ಮೇಲಿನ ಕರುಣೆಗೋ
ಅದು ಇವತ್ತಿಗೂ ಮಿಲಿಯನ್ ಡಾಲರ್ ಪ್ರಶ್ನೆ !!


ಹದಿನಾರಕ್ಕೆ ಮದುವೆಯಾಗಿ
ಇಪ್ಪತ್ತಕ್ಕೆ ವೈದವ್ಯ ಪ್ರಾಪ್ತವಾದ
ಪ್ರಮೀಳ ಕೊರಳಲ್ಲಿ
ಹಾಡು ಬತ್ತಿ  ಯಾವ ಕಾಲವಾಯಿತೋ ?
ಪೋಲಿಸ್ ಗತ್ತಿನ  ಪುಟ್ಸಾಮಿಯದು
ಈಗ  ಆರ್ .ಟಿ .ಓ  ಬ್ರೋಕರ್  ಚಾಕರಿ !
ಮೇಟ್ರುಆಗಬೇಕಿದ್ದ ಸೀನನದು
ಗುಮಾಸ್ತನ ನೌಕರಿ !!
ಇನ್ನು ಗಾಯಿತ್ರಿಯ ಮಕ್ಕಳ ,
ತಂದೆಯಾಗಬೇಕಿದ್ದ  ಶಂಕರ
ಸನ್ಯಾಸಿಯಾಗಿದ್ದಾನೆ  ಅಂತ  ಗಾಳಿಸುದ್ದಿ !!!
ನಾನು ಅಷ್ಟೆ.
ಏನೋ ಆಗಲು ಹೋಗಿ ಮತ್ತೆನೋ ಆಗಿದ್ದೇನೆ ..


ಜಿಜ್ಞಾಸೆಗೆ ಉತ್ತರ ಹುಡುಕಲು
ಮತ್ತೆ ಪದ್ಮಾಸನ ಹಾಕಿ ಕುಳಿತಿದ್ದೇನೆ .
ನಾನು ನಾನಾಗಬೇಕು..ನನ್ನಿಷ್ಟದಂತೆ  ಬದುಕಬೇಕು'
ಅನ್ನೋದು ಶೋಷಿತನ  ಕ್ರಾಂತಿಗೀತೆ
'ನೀನು ನಾನಾಗಬೇಕು.. ನಾನು.. ನೀನಾಗಬೇಕು'
ಎಂಬುದು ಪ್ರಣಯಿಯ ಉನ್ಮತ್ತ  ಪ್ರಲಾಪ
ಏನಾದರೂ ಆಗು ಮೊದಲು ಮಾನವನಾಗು
ಎನ್ನುವುದು ದ್ವೈತ.. ಅದ್ವೈತಗಳ  ಮೀರಿದ  ಕವಿವಾಣಿ


ಪ್ರಶ್ನೆಯಷ್ಟು  ಸರಳವೇ
ಉತ್ತರ ?
ಕನಸಿನಷ್ಟು ಸುಲಭವೇ
ಅದರ ಸಾಕ್ಷಾತ್ಕಾರ ?
ಪರಿವರ್ತನೆ ಜಗದ ನಿಯಮವಲ್ಲ
ಪರಿಸ್ಥಿತಿಯ ಹುನ್ನಾರ
ಬದುಕು ಉರಿದು ಬೂದಿಯಾಗಿ
ಅಸ್ತಿತ್ವ ಕಳೆದುಕೊಳ್ಳುವ ಕರ್ಪೂರ 



ಶನಿವಾರ, ಡಿಸೆಂಬರ್ 22, 2012

ರಂಗೋಲಿ ಬಿಡಿಸಿದ 
ಮಾತ್ರಕ್ಕೆ ,
ಅಂಗಳದ ಅಂದಗೆಡಿಸಿ 
ಹೋಗಬಹುದೆ? 
ಹಣತೆ ಹಚ್ಚಿದ 
ಮಾತ್ರಕ್ಕೆ .
ಕತ್ತಲ 'ಏಕಾಂತವನ್ನೂ '
ಹೊತ್ತಯ್ಯಬಹುದೆ ?

ನಿನ್ನ ಗುಂಗಲ್ಲಿ ಕವಿತೆ ಕಟ್ಟಿದ 
ಮಾತ್ರಕ್ಕೆ,
ಪ್ರತಿಪುಟವನ್ನೂ ಚಿತ್ತುಮಾಡುವ
ಧಾರ್ಷ್ಯ ತೋರಬಹುದೆ ?
ನಿನ್ನ ಹಾಜರಿಯಲ್ಲಿ ಹೂ ಅರಳಿದ
ಮಾತ್ರಕ್ಕೆ ,
ಬೇರಿಗೆ ಬಿಸಿನಿರೋಯ್ದು
ಹೋಗಬಹುದೇ ?

ಶನಿವಾರ, ಡಿಸೆಂಬರ್ 15, 2012

ಅಸ್ತಿತ್ವ



ಶಿಲೆಯ ಶಿಲ್ಪವಾಗಿಸಿ 
ಕಗ್ಗಲ್ಲ ದೇಗುಲವಾಗಿಸಿ 
ಮಂತ್ರ ಘೋಷ ..ಪೂಜೆ ನೇಮ 
-ಗಳಲ್ಲಿ ಹುಡುಕುತ್ತಿದ್ದೇವೆ 
'ನಿರ್ವಿಕಾರನ '

ವಿಜಯ ವೈಭೋಗವ 
ತ್ಯಾಗ ಬಲಿದಾನವ 
ಶಾಸನವಾಗಿಸಿ
ಭೂತಕನ್ನಡಿ ಹಿಡಿದು
ಹುಡುಕುತ್ತಿದ್ದೇವೆ
'ವಾಸ್ತವವ '

ರೋಡಿಗೆ ಹೆಸರಿಟ್ಟು
ಸರ್ಕಲ್ ನಲ್ಲಿ ಪ್ರತಿಮೆ ನಿಲ್ಲಿಸಿ
ಚಿತ್ರವಾಗಿಸಿ ,
ಪುಸ್ತಕದ ನಡುವಿನ
-ಹಾಳೆಗಳಲಿ ಹುಡುಕುತ್ತಿದ್ದೇವೆ
'ಮಹಾತ್ಮ ನ '

ನ್ಯಾಯವ ಕಟಕಟೆಯಲಿ ನಿಲ್ಲಿಸಿ
ಪ್ರೇಮವ ಸ್ಮಾರಕದಲಿ ಉಳಿಸಿ
ಭೋದಿವೃಕ್ಷದ ಕೆಳಗೆ
ಹುಡುಕುತ್ತಿದ್ದೇವೆ
'ಸಾಕ್ಷಾತ್ಕಾರವ '

ಭಾನುವಾರ, ನವೆಂಬರ್ 18, 2012

ನಿಜ ..ಅವಳು 
ಏಳು ಮಲ್ಲಿಗೆ ತೂಕದ
 ರಾಜಕುಮಾರಿ 
ಆದರೆ ಅವಳ ನೆನಪಿನ 
ನವಿಲುಗರಿ ..
ಬೆರಳಿಗೆ ತಾಕಿದರೆ 
ನನ್ನೆದೆಯ ಮೇಲೆ 
'ವಜನು' ತೂಕ 
ಬಿಡಿಗಾಸು ಹುಡುಗನ 
ಖಾಲಿ  ದಿಂಬಿನಲಿ 
ಕೋಟಿ ಕನಸ ಸುರಿದು 
ಹೊದಿಕೆ ತರಲು ಹೋದವಳು 
ಮೂರು ಚಳಿಗಾಲ  ಕಳೆದರೂ 
ತಿರುಗಿ ಬರಲಿಲ್ಲ ...


ಬರಿಗಾಲ ಹೈದನ 
ಕಾಲುದಾರಿಯಲಿ 
ಗುಲಾಬಿ ನೆಟ್ಟು 
ಬಿಂದಿಗೆ ಹಿಡಿದು ಹೋದವಳು 
ಮೂಗ್ಗು ಮುರುಟಿ ಹೋದರೂ 
ಇನ್ನು ನೀರ ತರಲಿಲ್ಲ ......

ಮಂಗಳವಾರ, ಅಕ್ಟೋಬರ್ 16, 2012

ಒರಟು ವಜ್ರಕ್ಕೆ 

ಹೊಳಪು ಕೊಟ್ಟ 

ಮೌಲ್ಯ ಕೊಟ್ಟ

ಸುವಾಸನೆ ಕೊಡಲಿಲ್ಲ 

ಮೃದಲ ಮಲ್ಲಿಗೆಗೆ 

ಒನಪು ಕೊಟ್ಟ

ಗಂಧ ಇಟ್ಟ

ಆಯಸ್ಸು ಕರುಣಿಸಲಿಲ್ಲ:

ಅಪೂರ್ಣತೆ ಜಗದ ನಿಯಮ
ಸಂತಸವೆಂದರೆ 
ನಿಲುಕದ ನಕ್ಷತ್ರ 
ಕಡಲಾಳದ ಮುತ್ತು 
ಎಂದುಕೊಂಡಿದ್ದ ನನಗೆ 
ಅದು 
ನಿನ್ನ ಅಂಗೈ ಗೆರೆಗಳಲ್ಲಿದೆ 
ಎಂಬ ಸತ್ಯ ಗೊತ್ತಿರಲಿಲ್ಲ ಗೆಳೆತಿ ..

ಮಂಗಳವಾರ, ಸೆಪ್ಟೆಂಬರ್ 11, 2012


ಭೋರ್ಗೆರವ  ಶರಧಿ
ಅದರ ಸೆರಗಲ್ಲೇ ..ಮಹಾಮೌನಿ
'ಹಿನ್ನಿರು'
ದಿಗ್ಗನೆ ಬೆಳಗುವ ದೀಪ
ಅದರ ಬದಿಯಲ್ಲೇ..ದಿವ್ಯ ಧ್ಯಾನಿ
'ಕತ್ತಲು'
ಸೃಷ್ಟಿಗಿಲ್ಲ ಅದರ ದೃಷ್ಟಿಗಿಲ್ಲ..
ಭೇದ ಭಿನ್ನ ಪಕ್ಷಪಾತ
ಹುಟ್ಟು ಸಾವು , ನೋವು ನಲಿವು
ಎಲ್ಲ ನಮ್ಮ ನಿಮ್ಮ .. ವರಾತ ..!!
ನಲುಗಿದೆ ನಲುಮೆಯ ಗಾನ 
ಶ್ರುತಿ ತಪ್ಪಿ 
ಅಳಬೇಕು.. ಮನಸಾರೆ ನಿನ್ನ 
ಬಿಗಿದಪ್ಪಿ 
ಜಾರುವ ಈ ಕಂಬನಿಗೆ 
ನಿನ್ನ ಬೊಗಸೆ ಬೇಕು ..
ನೀರಸ  ಈ ಬದುಕು 
ಚೂರು ಭರವಸೆ ಬೇಕು 


ನಿರಾಶೆ



ಕಣ್ಣೊಳಗೆ ಸರೋವರವಿಟ್ಟುಕೊಂಡು
ಗುಟುಕು ನೀರಿಗಾಗಿ ಎಡತಾಕಿದ್ದೇನೆ 
ಎದೆಯೊಳಗೆ. ನೀಲಾಂಜನವಿಟ್ಟುಕೊಂಡು 
ಕಿಡಿಗಾಗಿ ತಡಕಾಡಿದ್ದೇನೆ 
ನನ್ನೊಳಗೆ ಜಗವ ನಿಟ್ಟು ಕೊಂಡು 
ನಿನ್ನ ಹುಡುಕಿ ತಲ್ಲಣಿ ಸಿದ್ದೇನೆ ;
ಮಳೆಬಿಲ್ಲ.. ಗೆಳೆತನ 
ಆದರೂ ಬಣ್ಣಕ್ಕೆ ಬಡತನ !!!
ಗುಂಗೇರಿಸುವ..'ಗುಲಾಬಿಯಲ್ಲ  '
ಕಣ್ ಕುಕ್ಕುವ 'ಕನಕಾಂಬರ ವಲ್ಲ '  
ಅವಳು 
ಸರಳ ಸ್ನಿಗ್ದ ..ದಾಸವಾಳ ..!!!

ಶುಕ್ರವಾರ, ಆಗಸ್ಟ್ 10, 2012

ಸು -ಪ್ರಭಾತ ...




ಇಬ್ಬನಿ ಕುಡಿದ  ಕಣ್ಣಿನ
ದೊರೆಸಾನಿ ;
ಅವಳ ನೋಟ
ನಿರ್ಮಲ ,ಪ್ರಾಂಜಲ !

ಗುಲಾಬಿ ಗೊಂಚಲ  ಚೆಂದದ
ಹೂದಾನಿ;
ಅವಳ ನಗು
ಮೃದುಲ ,ಕೋಮಲ !


ನವಿಲುಗರಿ ಕನಸಿನ
ಯಜಮಾನಿ ;
ಅವಳ ಮನಸು
ಚಂಚಲ ,ವಿಹ್ವಲ !

ಜಿಟಿ ಜಿಟಿಸೋ ತುಂತುರು
ಮಳೆಹನಿ ;
ಅವಳ ಪ್ರೀತಿ
ನಿಶ್ಚಲ ..ಅಚಲ !!